ವಂದಿಸುವುದಾದಿಯಲಿ ಗಣನಾಥನ
ಶ್ರೀ ಪುರಂದರ ದಾಸರು
ಶ್ರೀ ಪುರಂದರ ದಾಸರು
ವಂದಿಸುವುದಾದಿಯಲಿ ಗಣನಾಥನ ॥ ಪ ॥
ಸಂದೇಹಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು ॥ ಅ.ಪ ॥
ಹಿಂದೆ ರಾವಣನು ತಾನು ವಂದಿಸದೆ ಗಜಮುಖನ
ನಿಂದು ತಪವನು ಗೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು ॥ ೧ ॥
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೆ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ॥ ೨ ॥
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿ ಪುರಂದರವಿಟ್ಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ ॥ ೩ ॥